ಕೃಪಾಬಾಯಿ ಸತ್ಯನಾಥನ್ (೧೮೬೨-೧೮೯೪) ಅವರು ಇಂಗ್ಲಿಷ್‌ ಕೃತಿಗಳನ್ನು ಬರೆಯುವ ಭಾರತೀಯ ಲೇಖಕಿ. == ಆರಂಭಿಕ ಜೀವನ == ಕೃಪಾಬಾಯಿ ಅವರು ಹರಿಪಂತ್ ಮತ್ತು ರಾಧಾಬಾಯಿ ಕಿಸ್ಟೀ ರವರ ಮಗಳಾಗಿ ೧೪ ಫೆಬ್ರವರಿ ೧೮೬೨ ರಂದು ಬಾಂಬೆ ಪ್ರೆಸಿಡೆನ್ಸಿಯ, ಅಹ್ಮದ್ ನಗರದಲ್ಲಿ ಜನಿಸಿದರು. ಇವರು ಹಿಂದೂ ಧರ್ಮದಲ್ಲಿ ಹುಟ್ಟಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಅವರು ಇನ್ನೂ ಮಗುವಾಗಿದ್ದಾಗ ಅವರ ತಂದೆ ನಿಧನರಾದರು ಮತ್ತು ಅವರನ್ನು ಅವರ ತಾಯಿ ಮತ್ತು ಹಿರಿಯ ಸಹೋದರ ಭಾಸ್ಕರ್ ಬೆಳೆಸಿದರು. ಕೃಪಾಬಾಯಿ ಅವರಿಗಿಂತ ದೊಡ್ಡವರಾದ ಭಾಸ್ಕರ್ ಅವರ ಮೇಲೆ ಪ್ರಬಲವಾದ ಪ್ರಭಾವವನ್ನು ಬೀರಿದರು. ಅವರಿಗೆ ಪುಸ್ತಕಗಳನ್ನು ಕೊಡುವ ಮೂಲಕ ಮತ್ತು ಅವರೊಂದಿಗೆ ಅನೇಕ ವಿಚಾರಗಳನ್ನು ಚರ್ಚಿಸುವ ಮೂಲಕ ಅವರ ಬುದ್ಧಿಶಕ್ತಿಯನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ಅಣ್ಣ ಭಾಸ್ಕರ್ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದರು ಮತ್ತು ಕೃಪಾಬಾಯಿರವರು ತಮ್ಮ ಅರೆ-ಆತ್ಮಚರಿತ್ರೆಯ ಕಾದಂಬರಿ- ಸಗುಣ: ಎ ಸ್ಟೋರಿ ಆಫ್ ನೇಟಿವ್ ಕ್ರಿಶ್ಚಿಯನ್ ಲೈಫ್‌ನಲ್ಲಿ ತಮ್ಮ ಅಣ್ಣನನ್ನು ಅಮರಗೊಳಿಸಿದರು. ಅವರು ಕಮಲಾ, ಎ ಸ್ಟೋರಿ ಆಫ್ ಹಿಂದೂ ಲೈಫ್ (೧೮೯೪) ಎಂಬ ಇನ್ನೊಂದು ಕಾದಂಬರಿಯನ್ನೂ ಬರೆದರು. ಈ ಎರಡೂ ಕಾದಂಬರಿಗಳಲ್ಲಿ ಅವರು ಲಿಂಗ, ಜಾತಿ, ಜನಾಂಗೀಯತೆ ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆ ಮಾತನಾಡುತ್ತಾರೆ. ಮನೆತನದ ದೂಷಣೆಗೆ ಒಳಗಾಗುವುದನ್ನು ವಿರೋಧಿಸುವ ಮಹಿಳೆಯರ ಸಂಕಟ ಹಾಗೂ ಕಮಲಾ ಮತ್ತು ಸಗುಣ ಇಬ್ಬರೂ ಪುಸ್ತಕಗಳತ್ತ ಆಕರ್ಷಿತರಾಗುತ್ತಾರೆ ಮತ್ತು ಅವರು ವಿವಿಧ ಹಂತದ ಹಗೆತನವನ್ನು ಎದುರಿಸುತ್ತಾರೆ, ಹೀಗೆ ಸಾಮಾಜಿಕ ಪರಿಸರದಲ್ಲಿನ ವ್ಯತ್ಯಾಸದ ಹೊರತಾಗಿಯೂ, ಎರಡು ಕಾದಂಬರಿಗಳು ಒಂದೇ ರೀತಿಯ ವಿಷಯದೊಂದಿಗೆ ವ್ಯವಹರಿಸುತ್ತದೆ. ಸಗುಣ ಬಹುಮಟ್ಟಿಗೆ ಆತ್ಮಚರಿತ್ರೆಯಾಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ ಕುಟುಂಬದ ಮಗಳಾಗಿ, ನಾಯಕಿಯ ವಿಲಕ್ಷಣಗಳ ಹೊರತಾಗಿಯೂ, ಔಪಚಾರಿಕ ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲದೆ ವೈದ್ಯಕೀಯ ಕಾಲೇಜಿಗೆ ಪ್ರವೇಶವನ್ನು ಪಡೆಯುತ್ತಾರೆ ಹಾಗೂ ನಂತರ ಕೃಪಾಬಾಯಿರವರು ತಮ್ಮ ಜೀವನವನ್ನು ಸಮಾನವಾಗಿ ಹಂಚಿಕೊಳ್ಳುವ ಮತ್ತು ಸಮಾನ ಮನಸ್ಸಿನ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಭಾಸ್ಕರ್ ಅವರ ಸಾವಿನಿಂದ ಕೃಪಾಬಾಯಿರವರು ತೀವ್ರವಾಗಿ ಆಘಾತಕ್ಕೊಳಗಾದರು ಮತ್ತು ಇಬ್ಬರು ಯುರೋಪಿಯನ್ ಮಿಷನರಿ ಮಹಿಳೆಯರು ಅವರನ್ನು ಮತ್ತು ಅವರ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡರು. ಇದು ಬ್ರಿಟಿಷರೊಂದಿಗೆ ಅವರ ಮೊದಲ ಮುಖಾಮುಖಿಯಾಗಿದ್ದು, ಸಗುಣ ಹೇಳುವಂತೆ ಇದು ಅವರಿಗೆ ಮಿಶ್ರ ಅನುಭವವಾಗಿತ್ತು. ನಂತರ ಅವರು ಬಾಂಬೆ ನಗರದ ವಸತಿ ಶಾಲೆಗೆ ಸೇರಿದರು. ಅವರು ಅಲ್ಲಿ ಒಬ್ಬ ಅಮೇರಿಕನ್ ಮಹಿಳಾ ವೈದ್ಯರನ್ನು ಭೇಟಿಯಾದರು. ಈ ಭೇಟಿಯಿಂದ ಅವರಿಗೆವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಬಂದಿತು. ಕೃಪಾಬಾಯಿಯವರು ತಮ್ಮ ತಂದೆಯವರ ಮಿಷನರಿ ಧ್ಯೇಯ ಮತ್ತು ಆದರ್ಶಗಳನ್ನು ತಮ್ಮ ಜೀವನದ ಆರಂಭದಲ್ಲಿಯೇ ಅಳವಡಿಸಿಕೊಂಡವರು. ವೈದ್ಯರಾಗುವ ಮೂಲಕ ಇತರ ಮಹಿಳೆಯರಿಗೆ, ಹಾಗೂ ವಿಶೇಷವಾಗಿ ಪರ್ದಾದಲ್ಲಿರುವವರಿಗೆ ಸಹಾಯ ಮಾಡುವುದಾಗಿ ನಿರ್ಧರಿಸಿದರು. ಈ ವೇಳೆಗಾಗಲೇ ಅವರ ಆರೋಗ್ಯ ಹದಗೆಡುವ ಲಕ್ಷಣ ಕಂಡು ಬಂದಿದ್ದರಿಂದ ಇಂಗ್ಲೆಂಡಿಗೆ ಹೋಗಿ ವೈದ್ಯಕೀಯ ವ್ಯಾಸಂಗ ಮಾಡಲು ವಿದ್ಯಾರ್ಥಿ ವೇತನ ಪಡೆದರೂ ಸಹ ಅವರಿಗೆ ಹೋಗಲು ಅನುಮತಿ ದೊರೆಯಲಿಲ್ಲ. ಆದಾಗ್ಯೂ, ಅವರಿಗೆ ೧೮೭೮ ರಲ್ಲಿ ಮದ್ರಾಸ್ ವೈದ್ಯಕೀಯ ಕಾಲೇಜಿಗೆ ಸೇರಲು ಅನುಮತಿ ದೊರೆಯಿತು ಮತ್ತು ಅತ್ಯಂತ ಪ್ರಸಿದ್ಧ ಕ್ರಿಶ್ಚಿಯನ್ ಮಿಷನರಿ ರೆವರೆಂಡ್ ಡಬ್ಲ್ಯೂ ಟಿ ಸತ್ಯನಾಧನ್ ಅವರ ಮನೆಯಲ್ಲಿ ವಸತಿ ವ್ಯವಸ್ಥೆ ದೊರೆಯಿತು. ಅವರ ಶೈಕ್ಷಣಿಕ ಸಾಧನೆಯು ವೈದ್ಯಕೀಯ ಕಾಲೇಜಿನ ಆರಂಭದ ದಿನದಿಂದಲೂ ಅದ್ಭುತವಾಗಿತ್ತು. ಆದರೆ ಒತ್ತಡ ಮತ್ತು ಅತಿಯಾದ ಕೆಲಸದ ಕಾರಣದಿಂದಾಗಿ, ಒಂದು ವರ್ಷದ ನಂತರ ಆರೋಗ್ಯದಲ್ಲಿ ಮೊದಲ ಕುಸಿತವನ್ನು ಅನುಭವಿಸಬೇಕಾಯಿತು ಮತ್ತು ೧೮೭೯ ರಲ್ಲಿ ಚೇತರಿಸಿಕೊಳ್ಳಲು ಪುಣೆಯಲ್ಲಿರುವ ತಮ್ಮ ಸಹೋದರಿಯ ಬಳಿಗೆ ಮರಳಬೇಕಾಯಿತು. == ಶಿಕ್ಷಕಿ ವೃತ್ತಿ == ಒಂದು ವರ್ಷದ ನಂತರ ಅವರು ಮದ್ರಾಸಿಗೆ ಮರಳಿದರು. ಅಲ್ಲಿ ಅವರು ರೆವರೆಂಡ್ ಅವರ ಮಗ ಸ್ಯಾಮ್ಯುಯೆಲ್ ಸತ್ಯನಾಥನ್ ಅವರನ್ನು ಭೇಟಿಯಾದರು ಮತ್ತು ಇಬ್ಬರ ನಡುವೆ ಸ್ನೇಹ ಬೆಳೆಯಿತು. ೧೮೮೧ ರಲ್ಲಿ ಸ್ಯಾಮ್ಯುಯೆಲ್ ಮತ್ತು ಕೃಪಾಬಾಯಿ ವಿವಾಹವಾದರು. ನಂತರ ಸ್ಯಾಮ್ಯುಯೆಲ್‌ರವರಿಗೆ ಊಟಕಮಂಡ್‌ನಲ್ಲಿರುವ ಬ್ರೀಕ್ಸ್ ಮೆಮೋರಿಯಲ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾಗಿ ಕೆಲಸ ದೊರಕಿತು. ಊಟಕಾಮಂಡ್‌ನಲ್ಲಿ, ಚರ್ಚ್ ಮಿಷನರಿ ಸೊಸೈಟಿಯ ಸಹಾಯದಿಂದ ಕೃಪಾಬಾಯಿರವರು ಮುಸ್ಲಿಂ ಬಾಲಕಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು ಮತ್ತು ಅವರು ಹಲವಾರು ಇತರ ಹುಡುಗಿಯರ ಶಾಲೆಗಳಲ್ಲಿ ಸಹ ಕಲಿಸಿದರು. ಊಟಕಮಂಡ್ ತನ್ನ ಹಿತಕರವಾದ ಹವಾಮಾನಕ್ಕೆ ಹೆಸರುವಾಸಿಯಾದ ಗಿರಿಧಾಮವಾಗಿತ್ತು ಮತ್ತು ಅಲ್ಲಿ ಕೃಪಾಬಾಯಿಯವರ ಆರೋಗ್ಯವು ಸುಧಾರಿಸಿತು. ಅವರು ಇಲ್ಲಿ ಬರೆಯಲು ಸಮಯ ಮತ್ತು ಶಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತು ಮತ್ತು ಪ್ರಮುಖ ನಿಯತಕಾಲಿಕಗಳಲ್ಲಿ "ಆನ್ ಇಂಡಿಯನ್ ಲೇಡಿ" ಎಂಬ ಅಡಿನಾಮದಿಂದ ಲೇಖನಗಳನ್ನು ಪ್ರಕಟಿಸಿದರು. ಮೂರು ವರ್ಷಗಳ ನಂತರ ದಂಪತಿಗಳು ರಾಜಮಂಡ್ರಿಗೆ ತೆರಳಿದರು, ಮತ್ತು ಕೃಪಾಬಾಯಿ ಮತ್ತೆ ಅನಾರೋಗ್ಯಕ್ಕೆ ತುತ್ತಾದರು. ಆದ್ದರಿಂದ ಅವರು ಕುಂಭಕೋಣಂಗೆ ಸ್ಥಳಾಂತರಗೊಂಡರು. ಅವರ ಆರೋಗ್ಯದ ಬದಲಾವಣೆಯ ಹೊರತಾಗಿಯೂ ಇದು ಅವರ ಬರವಣಿಗೆಗೆ ಬಹಳ ಫಲವತ್ತಾದ ಅವಧಿಯಾಗಿತ್ತು. ೧೮೮೬ ರಲ್ಲಿ ಅವರು ಶಾಶ್ವತವಾಗಿ ಮದ್ರಾಸಿಗೆ ಹಿಂದಿರುಗುವ ಹೊತ್ತಿಗೆ, ಅವರು ಪೂರ್ಣ ಪ್ರಮಾಣದ ಕಾದಂಬರಿಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದರು. ಸಗುಣ ೧೮೮೭ ಮತ್ತು ೧೮೮೮ ರ ನಡುವೆ ಪ್ರತಿಷ್ಠಿತ ಮದ್ರಾಸ್ ಕ್ರಿಶ್ಚಿಯನ್ ಕಾಲೇಜು ಮ್ಯಾಗಜೀನ್‌ನಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಆದಾಗ್ಯೂ, ಈ ಸಮಯದಲ್ಲಿ ಅವರ ಏಕೈಕ ಮಗು ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಮೊದಲೇ ಮರಣಹೊಂದಿತು. ಇದರಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು, ಅದಕ್ಕಾಗಿ ಆವರಿಗೆ ಚಿಕಿತ್ಸೆಯ ಅಗತ್ಯವಿತ್ತು. ಅವರಿಗೆ ಬಾಂಬೆಯಲ್ಲಿರುವಾಗ ಕ್ಷಯರೋಗವಿದೆ ಎಂದು ತಿಳಿದರೂ ಅದನ್ನು ಗುಣಪಡಿಸಲಾಗದಷ್ಟು ಉಲ್ಬಣವಾಗಿತ್ತು. ತಮಗೆ ಬದುಕಲು ಸ್ವಲ್ಪ ಸಮಯವಿದೆ ಎಂದು ತಿಳಿದ ನಂತರ ಅವರು ಕಮಲಾ ಕಾದಂಬರಿಯ ಕೆಲಸ ಪ್ರಾರಂಭಿಸಿದರು. ಅವರು ಸಾಯುವವರೆಗೂ ಪುಸ್ತಕದಲ್ಲಿ ನಿರಂತರವಾಗಿ ಕೆಲಸ ಮಾಡಿದರು. ತಮ್ಮ ಮಾವ ಮತ್ತು ತಮ್ಮ ಅತ್ತೆಯವರ ಆತ್ಮಚರಿತ್ರೆಯನ್ನು ಬರೆಯಲು ಮಾತ್ರ ಅವರಿಗೆ ಸಾಧ್ಯವಾಗಲೇ ಇಲ್ಲ. == ಕೃತಿಗಳು == *ಸಗುಣ*: ಎ ಸ್ಟೋರಿ ಆಫ್ ನೇಟಿವ್ ಕ್ರಿಶ್ಚಿಯನ್ ಲೈಫ್, ಚಂದಾನಿ ಲೋಕುಗೆ ಅವರಿಂದ ಸಂಪಾದಿಸಲ್ಪಟ್ಟಿದೆ, (ನವದೆಹಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೮). ಕಮಲಾ: ಎ ಸ್ಟೋರಿ ಆಫ್ ಹಿಂದೂ ಲೈಫ್, ಚಾಂದನಿ ಲೋಕುಗೆ ಸಂಪಾದಿಸಿದ್ದಾರೆ. == ಉಲ್ಲೇಖಗಳು ==